ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಮತ್ತು ಅಕ್ರಮವಾಗಿ ನಿಲುಗಡೆ ಮಾಡಲಾದ ಹಾಗೂ ಅನಾಥ ವಾಹನಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಟೋಯಿಂಗ್ ವಾಹನಗಳನ್ನು ಪಡೆದುಕೊಳ್ಳಲು ಉದ್ದೇಶಿಸಲಾಗಿರುತ್ತದೆ. ಅದರಂತೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಟೋಯಿಂಗ್ ವಾಹನ ಪರಿಶೀಲನಾ ಕಾರ್ಯವನ್ನು ಇಂದು ಪಾಲಿಕೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಟೋಯಿಂಗ್ ವಾಹನ ಪರಿಶೀಲನಾ ಕಾರ್ಯದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ಅವರು ಭಾಗವಹಿಸಿ, ಇಂದು ಟೋಯಿಂಗ್ ವಾಹನಗಳ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು.
ಟೆಂಡರ್ ಪಡೆದ ಗುತ್ತಿಗೆದಾರರು ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಪರಿಶೀಲನಾ ಕಾರ್ಯವನ್ನು ನಡೆಸಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ 6 ಟೋಯಿಂಗ್ ವಾಹನಗಳು
ಪರಿಶೀಲನಾ ಕಾರ್ಯದ ನಂತರ ಮಾತನಾಡಿದ ಆಯುಕ್ತರು, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಒಟ್ಟು 6 ಟೋಯಿಂಗ್ ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ವಾಹನಗಳ ಕಾರ್ಯಕ್ಷಮತೆ ಮತ್ತು ಗುತ್ತಿಗೆದಾರರ ಅರ್ಹತೆಯನ್ನು ಪರಿಶೀಲಿಸಿದ ನಂತರ, ಮುಂದಿನ ವಾರದಿಂದ ಈ ವಾಹನಗಳು ಅಧಿಕೃತವಾಗಿ ಟ್ರಾಫಿಕ್ ಪೊಲೀಸರ ಉಸ್ತುವಾರಿಯಲ್ಲಿ ರಸ್ತೆಗಿಳಿದು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಅನವಶ್ಯಕ ಪಾರ್ಕಿಂಗ್ ವಾಹನಗಳಿಂದ ಉಂಟಾಗುತ್ತಿದ್ದ ಕಿರಿಕಿರಿಯನ್ನು, ರಸ್ತೆಗಳಲ್ಲಿನ ಅಡೆತಡೆಗಳನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಟೋಯಿಂಗ್ ವಾಹನಗಳು ಸಹಕಾರಿಯಾಗಲಿವೆ ಎಂದು ತಿಳಿಸುತ್ತಾ, ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ ಮುಖ್ಯ ಇಂಜಿನಿಯರ್ ಕೆ.ವಿ. ರವಿ ಹಾಗೂ ಟ್ರಾಫಿಕ್ ಇಂಜಿನಿಯರಿಂಗ್ ಮೊಬಿಲಿಟಿ ಸೆಲ್ನ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
