ಸಮಗ್ರ ಸುದ್ದಿ

ಆರ್ಥಿಕ ಇಲಾಖೆಯ ಸಹಮತಿ ಬಳಿಕ ಗೌರವಧನ ಪರಿಷ್ಕರಣೆ: ರಹೀಂ ಖಾನ್

Share

ಬೆಳಗಾವಿ ಸುವರ್ಣಸೌಧ : ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರು ಸ್ಪಷ್ಟನೆ ನೀಡಿದರು.

ವಿಧಾನ ಪರಿಷತನಲ್ಲಿಂದು ಸದಸ್ಯರಾದ ಸುನೀಲ್ ಗೌಡ ಪಾಟೀಲ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 255ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು,
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಧ್ಯಕ್ಷರು. ಉಪಾಧ್ಯಕ್ಷರು, ಸದಸ್ಯರು ಮತ್ತು ಮಹಾನಗರ ಪಾಲಿಕೆಗಳಲ್ಲಿನ ಮೇಯರ್, ಉಪಮೇಯರ್ ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಳ ಮಾಡುವ ಕುರಿತು ಇತರ ರಾಜ್ಯಗಳ ಚುನಾಯಿತ ಪ್ರತಿನಿಧಿಗಳ ಗೌರವಧನದ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಗೌರವಧನ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ 20/09/2025ರ ಪತ್ರದನ್ವಯ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕರಿಗೆ ಕೋರಲಾಗಿತ್ತು.

ಪ್ರಸ್ತುತ, ಪೌರಾಡಳಿತ ನಿರ್ದೇಶನಾಲದ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆಯಲ್ಲಿರುತ್ತದೆ. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ದೊರೆತ ನಂತರ ಗೌರವಧನ ಪರಿಷ್ಕರಿಸಲು ಅವಕಾಶವಾಗುತ್ತದೆ ಎಂದು ಸಚಿವರು ವಿವರಿಸಿದರು.

ಸ್ಪಷ್ಟನೆ: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾಯಿತ ಸದಸ್ಯರಿಗೆ ಉಚಿತ ಬಸ್ ಪಾಸ್, ಪಿಂಚಣಿ ಹಾಗೂ ಟೋಲ್ ಫ್ರೀ ಪಾಸ್ ನೀಡುವ ಪ್ರಸ್ತಾವನೆ ನಗರಾಭಿವೃದ್ಧಿ ಇಲಾಖೆಯ ಪರಿಶೀಲನೆಯಲ್ಲಿ ಇರುವುದಿಲ್ಲ ಎಂದು ಇದೆ ವೇಳೆ ಸಚಿವರು ಸ್ಪಷ್ಟನೆ ನೀಡಿದರು.


Share

You cannot copy content of this page