ಬೆಂಗಳೂರು: ಮುಂಬರುವ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳು ಕನಿಷ್ಠ 10 ಪದಕಗಳನ್ನು ಗೆಲ್ಲುವಂತಾಗಬೇಕು. ಅವರಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಕೊಡಿಸಲು ನಾನು ಸಿದ್ದ’ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜು ಹೇಳಿದರು.
ಕರ್ನಾಟಕ ಒಲಿಂಪಿಕ್ ಭವನದಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಲಿಂಪಿಕ್ಸ್ ನಲ್ಲಿ ಕರ್ನಾಟಕದಿಂದ 15 ರಿಂದ 20 ಕ್ರೀಡಾಪಟುಗಳು ಭಾಗವಹಿಸುವಂತಾಗಬೇಕು. ಈ ಪೈಕಿ 10 ರಿಂದ 15 ಪದಕಗಳನ್ನು ಕನ್ನಡಿಗರು ಗೆಲ್ಲಬೇಕು ಎಂಬುದೇ ನನ್ನ ಕನಸು’ ಎಂದರು.
‘ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನದ ನೆನಪಿಗಾಗಿ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ. ಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಇಂಥ ಆಚರಣೆಗಳು ಮಹತ್ವ ಪಾತ್ರವಹಿಸುತ್ತದೆ’ ಎಂದು ಹೇಳಿದರು.
ಧ್ಯಾನ್ ಚಂದ್ ಪ್ರತಿಮೆಗೆ ಪುಷ್ಪಾರ್ಚನೆ
ಧ್ಯಾನ್ ಚಂದ್ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಡಾ.ಕೆ. ಗೋವಿಂದರಾಜು ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಪುಷ್ಪಾರ್ಚನೆ ಮಾಡಿದರು. ಕೆಒಎ ಕಾರ್ಯದರ್ಶಿ ಅನಂತರಾಜು, ಮಾಜಿ ಹಾಕಿ ಆಟಗಾರರಾದ ಸುನೀಲ್, ಅರ್ಜುನ್ ಹಾಲಪ್ಪ, ನಿಕ್ಕಿನ್ ಉತ್ತಪ್ಪ, ಮಾಜಿ ಕ್ರೀಡಾಪಟುಗಳಾದ ಉದಯ್ ಪ್ರಭು, ಜಿ.ದಿಲೀಪ್ ಸೇರಿದಂತೆ ಕೆಒಎ ಪದಾಧಿಕಾರಿಗಳು ಉಪಸ್ಥಿತರಿದ್ದರು.
