ಬೆಂಗಳೂರು: ಮೈಸೂರು ರಸ್ತೆಯ ಜವಳಿ ವಿನ್ಯಾಸ ಮುದ್ರಣ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಕೈಗಾರಿಕಾ ಅಗ್ನಿ ಅವಘಡದಲ್ಲಿ ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರು ಕಾರ್ಮಿಕರಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಹಿರಿಯ ಸಮಾಲೋಚಕರಾದ ಡಾ ಗುಣಶೇಖರ್ ವುಪ್ಪಲಪತಿ, ಬೆಂಕಿ ಅವಘಡದಿಂದ ಮುಖ, ಕೈಗಳು ಮತ್ತು ಬೆನ್ನಿನ ಮೇಲೆ ಸುಟ್ಟಗಾಯಗಳಾಗಿದ್ದವು. ಒಬ್ಬ ಗಾಯಾಳು ಉಸಿರಾಟದ ಕೊಳವೆಯಲ್ಲಿ (ಶ್ವಾಸನಾಳ) ಹೊಗೆ ತುಂಬಿ ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ಇತ್ತು.
ಗಾಯಾಳುಗಳು ಸ್ಪರ್ಶ್ ಆಸ್ಪತ್ರೆಗೆ ವರ್ಗಾವಣೆಯಾಗುತ್ತಿದ್ದಂತೆ ಸಾಮೂಹಿಕ ಅಪಘಾತ ಮತ್ತು ಸುಟ್ಟ ಗಾಯಗಳ ನಿರ್ವಹಣೆಯ ತಂಡವು ತಕ್ಷಣ ಸಕ್ರಿಯಗೊಂಡು ಕಾರ್ಯಪ್ರವೃತ್ತವಾಯಿತು.
ವಿಶೇಷವಾಗಿ ಮೀಸಲಾದ ಐಸಿಯು ಹಾಸಿಗೆಗಳನ್ನು ಸಜ್ಜುಗೊಳಿಸಿತು ಮತ್ತು ಕೆಲವೇ ನಿಮಿಷಗಳಲ್ಲಿ ಬಹುಶಿಸ್ತೀಯ ತಜ್ಞರ ತುರ್ತು ತಂಡವನ್ನು ಒಟ್ಟುಗೂಡಿಸಿತು.ಇದು ತೀವ್ರವಾದ ಸುಟ್ಟಗಾಯಗಳನ್ನು ನಿರ್ವಹಿಸಲು ನಿರ್ಣಾಯಕವಾಯಿತು. ಗಾಯದ ತೀವ್ರತೆ ಮತ್ತು ಮುಂದಿನ ಹಂತಗಳ ಕುರಿತು ಕುಟುಂಬಗಳಿಗೆ ಮಾಹಿತಿ ನೀಡುವುದರೊಂದಿಗೆ ಗಾಯಾಳುಗಳನ್ನು ತ್ವರಿತವಾಗಿ ಪರೀಕ್ಷಿಸಿ ಚಿಕಿತ್ಸೆ ಆರಂಭಿಸಿ ದೇಹಸ್ಥಿತಿ ಸ್ಥಿರಗೊಳಿಸಲಾಯಿತು.
ನಮ್ಮ ತಂಡಗಳಾದ ಸೌಂದರ್ಯ ಮತ್ತು ಪುನರ್ನಿರ್ಮಾಣ ಪ್ಲಾಸ್ಟಿಕ್ ಸರ್ಜರಿ ಹಿರಿಯ ಸಮಾಲೋಚಕ ಡಾ. ದೀಪಕ್ ಕೆ. ಎಲ್. ಅವರೊಂದಿಗೆ ಬಹುವಿಭಾಗೀಯ ತಜ್ಞರು, ಅರಿವಳಿಕೆ ತಜ್ಞರು, ತೀವ್ರ ನಿಗಾ ತಜ್ಞರು, ಸುಟ್ಟ ಗಾಯಗಳ ಚಿಕಿತ್ಸೆಗಾಗಿ ಸನ್ನದ್ಧಗೊಳಿಸಲಾದ ವಿಶೇಷ ತರಬೇತಿ ಪಡೆದ ದಾದಿಯರು, ಪೌಷ್ಟಿಕಾಂಶ ತಜ್ಞರು ಮತ್ತು ಚಿಕಿತ್ಸಕರು ನಿರಂತರ ನಿಗಾ ವಹಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಸುಟ್ಟ ಗಾಯಗಳಿಂದ ತೀವ್ರ ತರದ ಸೋಂಕು ಉಂಟಾಗುವುದರಿಂದ 21 ತರಬೇತಿ ಪಡೆದ ದಾದಿಯರನ್ನು ಈ ಐವರ ಆರೈಕೆಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಯಿತು.
ಮುಂದಿನ ಐದು ಗಂಟೆಗಳಲ್ಲಿ, ತಂಡದ ಸಂಘಟಿತ ಪ್ರಯತ್ನ ಕೈಗೂಡಿತು. ಪ್ರತಿ ರೋಗಿಯ ಸುಟ್ಟ ಗಾಯಗಳ ನಿರ್ವಹಣೆಯನ್ನು ಪ್ರಾರಂಭಿಸಲಾಯಿತು. ಶ್ವಾಸ ನಾಳದ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ತುರ್ತು ಇನ್ಟ್ಯುಬೇಷನ್ ಬೆಂಬಲ ಒದಗಿಸಲಾಯಿತು.
“ತೀವ್ರವಾದ ಸುಟ್ಟಗಾಯಗಳು ಜೀವಕ್ಕೆ ಅಪಾಯಕಾರಿ ಮತ್ತು ತಕ್ಷಣದ, ಹಸ್ತಕ್ಷೇಪದ ಅಗತ್ಯವಿರುತ್ತದೆ. ಸೋಂಕು ಉಂಟಾಗದಂತೆ ತಡೆಯುವುದು ಅತ್ಯಂತ ಸವಾಲಿನದ್ದಾಗಿರುತ್ತದೆ. ಇದು ಇತರ ಅಂಗಾಗಗಳಿಗೂ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ತೀವ್ರ ತರದ ಸುಟ್ಟಗಾಯಾಳುಗಳ ಚಿಕಿತ್ಸೆಯ ಮೊದಲ 48 ಗಂಟೆಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ ಎಂದ ಅವರು ಸ್ಪರ್ಶ್ ಆಸ್ಪತ್ರೆಯ ತಂಡ ಮೊದಲಿಗೆ ಉಸಿರಾಟದ ಸ್ಥಿರೀಕರಣ, ನಿಖರವಾದ ದ್ರವ ನಿರ್ವಹಣೆ, ತಾಪಮಾನ ನಿಯಂತ್ರಣ, ಆಕ್ರಮಣಕಾರಿ ಗಾಯಗಳ ಆರೈಕೆ ಮತ್ತು ತಡೆರಹಿತ ಪೋಷಣೆಯನ್ನು ತೀವ್ರ ನಿಗಾ ಘಟಕ, ವಿಶೇಷ ದಾದಿಯರ ತಂಡ ನಿರ್ವಹಿಸಿತು ಎಂದು ವಿವರಿಸಿದರು.
ಸ್ಪರ್ಶ್ ಆಸ್ಪತ್ರೆಗಳ ಸಮೂಹ ವೈದ್ಯಕೀಯ ನಿರ್ದೇಶಕ ಡಾ ರಂಜನ್ ಶೆಟ್ಟಿ ಮಾತನಾಡಿ, ” ಸುಟ್ಟ ಗಾಯಗಳಿಂದ ತೀವ್ರವಾಗಿ ಬಳಲುತ್ತಿರುವ ಹಲವು ಸಂಖ್ಯೆಯ ರೋಗಿಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಸಾಂಸ್ಥಿಕ ಸನ್ನದ್ಧತೆ, ಅನುಭವಿ ತಂಡದ ಬದ್ಧತೆ ಜೊತೆಗೆ ಐಸಿಯುನ ಸಮಗ್ರ ಮೂಲಸೌಕರ್ಯಗಳನ್ನು ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಸದಾ ಸನ್ನದ್ಧ ತಜ್ಞರ ತಂಡ ಮತ್ತು ವ್ಯವಸ್ಥೆಗಳ ಮೇಲೆ ನಿರಂತರ ಹೂಡಿಕೆಗಳು ಈ ರೀತಿಯ ಯಶಸ್ವಿ ಚಿಕಿತ್ಸೆಯೊಂದಿಗೆ ರೋಗಿಗಳ ಶೀಘ್ರ ಚೇತರಿಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸ್ಪರ್ಶ್ ಆಸ್ಪತ್ರೆಗಳ ಸಮೂಹದ ಸಿಇಒ ಜಸ್ದೀಪ್ ಸಿಂಗ್, ಇಂತಹ ತುರ್ತು ಸಂದರ್ಭಗಳಲ್ಲಿ ಸ್ಪರ್ಶ್ ಆಸ್ಪತ್ರೆಯ ಬಹುವಿಭಾಗೀಯ ತಂಡ ಚಿಕಿತ್ಸೆಗೆ ಸದಾ ಸನ್ನದ್ಧವಾಗಿದ್ದು , ತುರ್ತು ಚಿಕಿತ್ಸೆಯ ಲಭ್ಯತೆ ಹಾಗೂ ಕ್ಷಿಪ್ರ ಪ್ರತಿಸ್ಪಂದನೆ ಬಹು ಸಂಖ್ಯೆಯ ಸುಟ್ಟ ಗಾಯಾಳುಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಪಡೆಯಲು ಮತ್ತು ಚೇತರಿಸಿಕೊಳ್ಳಲು ಅನುವಾಗುವಂತೆ ಸಜ್ಜುಗೊಳಿಸಲಾಗಿದ್ದು ಬೆಂಕಿ ಅವಘಡಗಳಂತಹ ಗಂಭೀರ ಪ್ರಕರಣಗಳ ಸಂದರ್ಭಗಳಲ್ಲಿ ನೆರವಿಗೆ ಬರಲಿದೆ ಎಂದರು.
