ಸಮಗ್ರ ಸುದ್ದಿ

ಧಾರವಾಡದಲ್ಲಿ 𝟮𝗗 𝟰𝗞 ಡಿಜಿಟಲ್ ತಾರಾಲಯ ನಿರ್ಮಾಣಕ್ಕೆ ಸಚಿವ ಸಂಪುಟ ಅಸ್ತು: ಸಚಿವ ಎನ್‌ ಎಸ್‌ ಭೋಸರಾಜು

Share

ಬೆಂಗಳೂರು: ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಾದ ‘ ಧಾರವಾಡ ಡಿಜಿಟಲ್ ತಾರಾಲಯ’ (𝗗𝗶𝗴𝗶𝘁𝗮𝗹 𝗣𝗹𝗮𝗻𝗲𝘁𝗮𝗿𝗶𝘂𝗺) ನಿರ್ಮಾಣಕ್ಕೆ ಎದುರಾಗಿದ್ದ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗಿವೆ. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 𝟮𝗗 𝟰𝗞 ರೆಸಲ್ಯೂಷನ್‌ನ ಡಿಜಿಟಲ್ ತಾರಾಲಯ ಸ್ಥಾಪನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯು ಗುರುವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, 2017ರಲ್ಲಿ ಈ ವಿಜ್ಞಾನ ಕೇಂದ್ರದ ಆವರಣದಲ್ಲಿ 15 ಮೀಟರ್ ಸುತ್ತಳತೆಯ 3D 8K ತಾರಾಲಯ ನಿರ್ಮಾಣಕ್ಕಾಗಿ ಸರ್ಕಾರ ರೂ. 𝟮𝟮.𝟬𝟬 ಕೋಟಿ ಅನುಮೋದನೆ ನೀಡಿತ್ತು. ಇದರಲ್ಲಿ ರೂ. 𝟵.𝟯𝟭 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಸೆಪ್ಟಿಕ್ ಟ್ಯಾಂಕ್, ಫಾಲ್ಸ್ ಸೀಲಿಂಗ್ ಸೇರಿದಂತೆ ಬಹುತೇಕ ಸಿವಿಲ್ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಆದರೆ, ಕೋವಿಡ್-19 ಸಂಕಷ್ಟ ಹಾಗೂ ತಾರಾಲಯದ ಉಪಕರಣಗಳ ಬೆಲೆ ವಿಪರೀತವಾಗಿ ಏರಿಕೆಯಾದ ಕಾರಣ (ಕೇವಲ ಉಪಕರಣಗಳಿಗೆ ರೂ. 29.5 ಕೋಟಿ ಅಂದಾಜಿಸಲಾಗಿತ್ತು) ಈ ಯೋಜನೆಯನ್ನು 2020ರಲ್ಲಿ ಸ್ಥಗಿತಗೊಳಿಸಲಾಗಿತ್ತು.

ಹಣಕಾಸು ಹೊರೆ ತಗ್ಗಿಸಿ, ಯೋಜನೆ ಸಾಕಾರಕ್ಕೆ ಮುನ್ನುಡಿ:
ಯೋಜನೆ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಲಭ್ಯವಿರುವ ಉಳಿಕೆ ಅನುದಾನದಲ್ಲೇ (ರೂ. 𝟭𝟮.𝟲𝟵 ಕೋಟಿ) ಅತ್ಯಾಧುನಿಕ 𝟮𝗗 𝟰𝗞 ಪ್ರೊಜೆಕ್ಷನ್ ಸಿಸ್ಟಮ್, ಡೋಮ್, ಸಾಫ್ಟ್‌ವೇರ್ ಹಾಗೂ ಆಡಿಯೋ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಿದೆ. ಇದೀಗ ಈ ಪರಿಷ್ಕೃತ ಪ್ರಸ್ತಾವನೆಗೆ ಹಣಕಾಸು ಇಲಾಖೆ ಹಾಗೂ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (𝗞𝗦𝗧𝗘𝗣𝗦) ಮೂಲಕ ಶೀಘ್ರವೇ ಉಪಕರಣಗಳ ಖರೀದಿಗೆ ಚಾಲನೆ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

“ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಡಿಜಿಟಲ್ ತಾರಾಲಯ ನಿರ್ಮಾಣ ಕಾರ್ಯವು ಕೋವಿಡ್ ಕಾರಣಗಳಿಂದಾಗಿ ಹಾಗೂ ಉಪಕರಣಗಳ ಬೆಲೆ ಏರಿಕೆಯಿಂದಾಗಿ ನೆನೆಗುದಿಗೆ ಬಿದ್ದಿತ್ತು. ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಒಲವು ಮೂಡಿಸಲು ಈ ತಾರಾಲಯ ಅತ್ಯಗತ್ಯವಾಗಿದೆ. ಹೀಗಾಗಿ ಇನ್ನಷ್ಟು ವಿಳಂಬ ಮಾಡದೆ, ಆರ್ಥಿಕ ಹೊರೆಯೂ ಆಗದಂತೆ, ಲಭ್ಯವಿರುವ ಅನುದಾನದಲ್ಲೇ ಅತ್ಯಾಧುನಿಕ 𝟮𝗗 𝟰𝗞 ತಾರಾಲಯ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಶೀಘ್ರದಲ್ಲೇ ಬಾಕಿ ಉಳಿದಿರುವ ಕಾಮಗಾರಿ ಹಾಗೂ ಉಪಕರಣಗಳ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮರ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.


Share

You cannot copy content of this page