ಬೆಂಗಳೂರು: ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್ಲೈನ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಂಚಕರಿಗೆ ಬಿಸಿ ಮುಟ್ಟಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಸೈಬರ್ ವಂಚನೆಗೆ ಒಳಗಾದ ಹಣವನ್ನು ಬ್ಯಾಂಕುಗಳಲ್ಲಿ ಫ್ರೀಜ್ ಮಾಡುವ (Lien Mark) ಪ್ರಕ್ರಿಯೆಯಲ್ಲಿ ಕರ್ನಾಟಕ ಅತ್ಯುನ್ನತ ಸಾಧನೆ ಮಾಡಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಪೊಲೀಸ್ ವೈರ್ಲೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರಲ್ಲದೆ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ವಂಚನೆಗೊಳಗಾದ ಸಾರ್ವಜನಿಕರ ಹಣವನ್ನು ಬ್ಯಾಂಕುಗಳಲ್ಲೇ ತಡೆಹಿಡಿಯುವಲ್ಲಿ (Lien Marked Amount) ಕರ್ನಾಟಕ ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ, ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾದ 3,203 ಕೋಟಿ ರೂ.ಗಳಲ್ಲಿ 548 ಕೋಟಿ ರೂ. (17%) ಹಣವನ್ನು ಬ್ಲಾಕ್ ಮಾಡಿದ್ದರೆ, ಕರ್ನಾಟಕದಲ್ಲಿ ವರದಿಯಾದ 2,640 ಕೋಟಿ ರೂ.ಗಳಲ್ಲಿ 436 ಕೋಟಿ ರೂ. (17%) ಹಣವನ್ನು ಯಶಸ್ವಿಯಾಗಿ ತಡೆಹಿಡಿಯುವ ಮೂಲಕ ಸಾರ್ವಜನಿಕರ ಹಣವನ್ನು ರಕ್ಷಿಸಿದೆ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
2025ರಲ್ಲಿ ವೆಬ್ ಮೂಲಕ ಹಾಗೂ 2026ರಲ್ಲಿ ವಾಟ್ಸಪ್ ಚಾಟ್ ಮೂಲಕ ದೂರು ನೀಡುವ ಸೌಲಭ್ಯವನ್ನು ನೀಡಿದ ನಂತರ, ವೈರ್ಲೆಸ್ ಘಟಕಕ್ಕೆ ದೂರು ನೀಡುವ ಸಾರ್ವಜನಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ತಿಳಿಸಿದರು.
2026ರಲ್ಲಿ ಆರಂಭಿಕ (ಜನವರಿ-ಮೇ ವರೆಗೆ) 5 ತಿಂಗಳಲ್ಲೇ 10,33,352 ಕರೆಗಳು ಬಂದಿದ್ದು, 90,225 ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ 807 ಕೋಟಿ ರೂ. ವಂಚನೆಯಾಗಿದ್ದು, ಅದರಲ್ಲಿ ಈಗಾಗಲೇ 216 ಕೋಟಿ ರೂ. (27%) ಹಣವನ್ನು ಬ್ಲಾಕ್ ಮಾಡುವ ಮೂಲಕ ದಾಖಲೆ ಬರೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇಲಾಖೆಯ ‘ಉತ್ತಮ ಕಾರ್ಯವಿಧಾನಗಳು’
ಸೈಬರ್ ಅಪರಾಧಗಳ ತನಿಖೆ ಮತ್ತು ಹಣ ಮರುಪಡೆಯುವಿಕೆಯನ್ನು ವೇಗಗೊಳಿಸಲು ಪೊಲೀಸ್ ಇಲಾಖೆ ಹಲವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ ಎಂದು ತಿಳಿಸಿರುವ ಸಚಿವರು ಬ್ಯಾಂಕುಗಳಲ್ಲಿ ಸೈಬರ್ ವಂಚನೆ ಹಣವನ್ನು ತಕ್ಷಣವೇ ಸ್ಥಗಿತಗೊಳಿಸಲು (Lien Marking) ಬ್ಯಾಂಕ್ ಫಾಲೋ-ಅಪ್ ಟೀಮ್ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ, ಇಲಾಖೆಯ ವೈರ್ಲೆಸ್ ಸಿಬ್ಬಂದಿಗೆ ಸೈಬರ್ ಅಪರಾಧ, ಸಿಸ್ಟಮ್ ಅಡ್ಮಿನ್ ಮತ್ತು I4C (Indian Cyber Crime Coordination Centre) ಪ್ಲಾಟ್ಫಾರ್ಮ್ ಬಳಕೆಯ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ.
ಬ್ಯಾಂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಸಿಸಿಟಿವಿ ದೃಶ್ಯಾವಳಿಗಳ ವಿನಂತಿ ಹಾಗೂ ಬ್ಲಾಕ್ ಆದ ಹಣವನ್ನು ಸಾರ್ವಜನಿಕರಿಗೆ ಮರಳಿ ಕೊಡಿಸಲು ಮತ್ತು ಎಫ್ಐಆರ್ (FIR) ದಾಖಲಿಸಲು ವಿಶೇಷ ಸಂಪರ್ಕ ಅಧಿಕಾರಿಗಳನ್ನು (Liaison Officers) ಬಳಸಿಕೊಳ್ಳಲಾಗುತ್ತಿದೆ ಎಂಬ ವಿವರಗಳನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.
ತಂತ್ರಜ್ಞಾನ ಆಧಾರಿತ ಆಧುನಿಕ ಸುಧಾರಣೆಗಳು
ಸಾರ್ವಜನಿಕರಿಗೆ ದೂರು ನೀಡಲು ಸುಲಭವಾಗುವಂತೆ ಮತ್ತು ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಇಲಾಖೆಯು ಇತ್ತೀಚೆಗೆ ಹಲವ ತಾಂತ್ರಿಕ ಸುಧಾರಣೆಗಳನ್ನು ತಂದಿದೆ. 2025ರಲ್ಲಿ ವೆಬ್-ಆಧಾರಿತ ಕಂಪ್ಲೇಂಟ್ ಬಾಟ್ ಮತ್ತು 2026 ರಲ್ಲಿ ವಾಟ್ಸಾಪ್ ಕಂಪ್ಲೇಂಟ್ ಬಾಟ್ (WhatsApp Complaint Bot) ಪರಿಚಯಿಸಲಾಗಿದೆ. ದೂರುಗಳ ಆದ್ಯತೆಯ ಮೇರೆಗೆ ಕರೆಗಳನ್ನು ವಿಂಗಡಿಸಲು ಮತ್ತು ಸ್ವಯಂಚಾಲಿತವಾಗಿ ನಿರ್ವಹಿಸಲು IVRS ತಂತ್ರಜ್ಞಾನ ಬಳಸಲಾಗುತ್ತಿದೆ. ಸಾರ್ವಜನಿಕರು ಕರೆ ಮಾಡಿದಾಗ ಕಟ್ ಆದ ಕರೆಗಳಿಗೆ (Dropped Calls) ದೂರುಗಳನ್ನು ಅಪ್ಲೋಡ್ ಮಾಡಲು ಸ್ವಯಂಚಾಲಿತ ಬಾಟ್ ಲಿಂಕ್ ಕಳುಹಿಸಲಾಗುತ್ತಿದೆ.
ಐ4ಸಿ (I4C) ಪ್ಲಾಟ್ಫಾರ್ಮ್ನಲ್ಲಿ ಬ್ಯಾಂಕ್ ವಹಿವಾಟುಗಳನ್ನು ವೇಗವಾಗಿ ನಿರ್ಬಂಧಿಸಲು 51 ಪಿಎಸ್ಐ (PSI) ಮತ್ತು ಹೆಡ್ ಕಾನ್ಸ್ಟೆಬಲ್ಗಳನ್ನು (HC) ನಿಯೋಜಿಸಲಾಗಿದೆ. ಒಟ್ಟಾರೆಯಾಗಿ, ತಂತ್ರಜ್ಞಾನ ಮತ್ತು ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿ ಮತ್ತು ಸಾರ್ವಜನಿಕರ ಕಷ್ಟದ ಹಣವನ್ನು ರಕ್ಷಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ನಿಂತಿದೆ, ರಾಜ್ಯದ ಪೊಲೀಸರು ಬಳಸುತ್ತಿರುವ ವೈರ್ಲೆಸ್ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸದೃಢಗೊಳಿಸುವ ಅವಶ್ಯಕತೆಯಿದೆ ಎಂದು ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (DGP) ಹಾಗೂ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (DG & IGP) ಡಾ. ಎಂ.ಎ. ಸಲೀಂ, ಕರ್ನಾಟಕ ಸಂವಹನ, ಲಾಜಿಸ್ಟಿಕ್ಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್. ಮುರುಗನ್ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
