ಸಮಗ್ರ ಸುದ್ದಿ

ಬೆಂಗಳೂರಿನ ಸಂಚಾರ ದಟ್ಟಣೆ ಬಗೆಹರಿಸುವುದೇ ನಮ್ಮ ಉದ್ದೇಶ: ಸಿಎಂ ಡಿ ಕೆ ಶಿವಕುಮಾರ್ |ಟೋಲ್ ಮುಕ್ತ ಹೆಬ್ಬಾಳ ಮೂರು ಪಥ ಜೋಡಿ ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

Share

ಬೆಂಗಳೂರು:ಬೆಂಗಳೂರಿಗೆ ಹೆಬ್ಬಾಗಿಲಿನಂತೆ ಹೆಬ್ಬಾಳ ಆಗಿದೆ. ಹೆಬ್ಬಾಳ ಭಾಗದ ಸಂಚಾರ ದಟ್ಟಣೆಗೆ ಒಂದಷ್ಟು ಮುಕ್ತಿ ನೀಡಿದ್ದೇವೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದೇ ನಮ್ಮ ಉದ್ದೇಶ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್ ವರೆಗೂ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಡಿ ಕೆ ಶಿವಕುಮಾರ್ ಅವರು ಹೆಬ್ಬಾಳ ಜಂಕ್ಷನ್ ನಲ್ಲಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.

“2.5 ಕಿಲೋ ಮೀಟರ್ ಉದ್ದದ ಕಟ್ ಅಂಡ್ ಕವರ್ ಟನಲ್ ಇದಾಗಿದ್ದು. ಇದು ಟೋಲ್ ಮುಕ್ತವಾಗಿರಲಿದೆ. ಬಿಡಿಎ ಅವರೇ ತಮ್ಮ ಸಂಪತ್ತು, ಹಣದ ಮೂಲಕ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ” ಎಂದು ಹೇಳಿದರು.

“ಜನರ ಬದುಕಿನಲ್ಲಿ ಬದಲಾವಣೆ ತರಲು ಹುಮ್ಮಸ್ಸಿನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಮುಂದಿನ 50 ವರ್ಷಕ್ಕೆ ಯೋಜನೆ ರೂಪಿಸುತ್ತಿದ್ದೇವೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಹೆಬ್ಬಾಳದಿಂದ ಮೇಲೆ ಕಾವೇರಿ ನೀರು ನೀಡಲು ಅನುಮತಿ ಇರಲಿಲ್ಲ‌. ಈ ಮೇಕೆದಾಟು ಯೋಜನೆಗೆ ಸಂಬಂಧ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೆವು. ಇದಕ್ಕೆ ಫಲ ಸಿಕ್ಕಿದೆ” ಎಂದರು.

ಅವಕಾಶ ಸಿಕ್ಕಾಗ ಜನಪರ ಕೆಲಸ ಮಾಡಬೇಕು

“ಅವಕಾಶ ಸಿಕ್ಕಾಗ ಜನಪರ ಕೆಲಸ ಮಾಡಬೇಕು. ನಾವ್ಯಾರು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಕೆಂಪೇಗೌಡರು ಇಲ್ಲ ಆದರೆ ಅವರ ಕೆಲಸಗಳಿವೆ, ಎಸ್ ಎಂ ಕೃಷ್ಣ ಅವರ ಹೆಸರಿನಲ್ಲಿ ದಶಪಥ ರಸ್ತೆ ಉದ್ಘಾಟನೆ ಮಾಡಲಾಗಿದೆ. ಬೆಂಗಳೂರು ಬಿಜಿನೆಸ್ ಕಾರಿಡಾರ್ ಎಂದು ಮರನಾಮಕರಣ ಮಾಡಿ ಹೊಸ ಯೋಜನೆ ಮಾಡಲಾಗುತ್ತಿದೆ. 2006 ರಲ್ಲಿಯೇ ಈ ಯೋಜನೆ ಮಾಡಿದ್ದರೆ 2-3 ಸಾವಿರ ಕೋಟಿಗೆ ಈ ಯೋಜನೆ ಮುಗಿಯುತ್ತಿತ್ತು. ಈಗ 24 ಸಾವಿರ ಕೋಟಿ ಆಗುತ್ತಿದೆ. ಅಲ್ಲಿನ ರೈತರಿಗೆ ಒಳ್ಳೆ ಪರಿಹಾರ, ಟಿಡಿಆರ್, ಎಫ್ ಎಆರ್ ನೀಡಲಾಗಿದೆ. 123 ಕಿಲೋ ಮೀಟರ್ ಉದ್ದ ಈ ರಸ್ತೆ ಇರಲಿದೆ.

ಜನರ ಸಮಯ ಉಳಿಸಬೇಕು

“ಹೆಬ್ಬಾಳದಿಂದ ರೇಷ್ಮೆ ಸಂಸ್ಥೆವರೆಗೆ 17 ಕಿಮೀ ಉದ್ದದ ಟನಲ್ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ನಾಲ್ಕು ವರ್ಷದಲ್ಲಿ ಯೋಜನೆ ಮುಗಿಯಲಿದೆ. ಟನಲ್ ರಸ್ತೆಯಲ್ಲಿ ದುಡ್ಡು ಕೊಟ್ಟು ಹೋಗುವವರು ಹೋಗುತ್ತಾರೆ. ನಿಮಗೇನು ತೊಂದರೆ ಎಂದು ಕೇಳುತ್ತೇನೆ. ಇದರಿಂದ ಜನರ ಸಮಯ ಉಳಿಯುತ್ತದೆ. ಹಿಡಿದ ಕೆಲಸವನ್ನು ಮಾಡಬೇಕು. ಜನರ ಸಮಯ ಉಳಿಸುವುದು ಮುಖ್ಯ. ಜನತೆ ಸಂಜೆ 5-6 ಗಂಟೆ ಮೇಲೆ ಕೆಲಸ ಮುಗಿಸಿ ಮನೆ ಸೇರಬೇಕು. ಇದಕ್ಕೆ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ” ಎಂದರು.

ಟೀಕೆ ಮಾಡಿದಷ್ಟು ಎಚ್ಚರಿಕೆಯಿಂದ ಇರಬೇಕು

“1.40 ಕೋಟಿ ಜನಸಂಖ್ಯೆ, 1.35 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ಇಡೀ ಬೆಂಗಳೂರಿನಲ್ಲಿ ಕಸದ ಸಮಸ್ಯೆಯಿದೆ.‌ ಅದನ್ನು ಬಗೆಹರಿಸುವ ಕೆಲಸವನ್ನು ಯಾರಾದರೂ ಮಾಡಿದ್ದರೇ? ನಾನು ಮುಖ್ಯಮಂತ್ರಿ ಆದ ತಕ್ಷಣ ವಿರೋಧ ಪಕ್ಷದ ನಾಯಕರು 10 ಸಾವಿರ ಕೋಟಿ ಲಂಚ ಹೊಡೆದಿದ್ದೇನೆ ಎಂದು ಆರೋಪ ಮಾಡಿದರು. ಇನ್ನೂ ಟೆಂಡರ್ ಆಗಿಲ್ಲ, ಯಾವುದೂ ತೀರ್ಮಾನ ಆಗಿಲ್ಲ. ಯಂತ್ರೋಪಕರಣಗಳಿಗೆ 4-5 ಸಾವಿರ ಕೋಟಿ ಆಗಬಹುದು ಆದರೆ 10 ಸಾವಿರ ಕೋಟಿ ಎಂದು ಟೀಕೆ ಮಾಡಿದರು. 10 ಸಾವಿರ ಕೋಟಿ ಇಡಲು 20 ದೊಡ್ಡ ಶೆಡ್ ಗಳನ್ನು ಬೇಕಾಗಬಹುದೇನೋ” ಎಂದು ಲೇವಡಿ ಮಾಡಿದ ಮುಖ್ಯಮಂತ್ರಿಯವರು “ಅವರು ಟೀಕೆ ಮಾಡಿದಷ್ಟು ನಾವು ಎಚ್ಚರಿಕೆಯಿಂದ ಇರಬೇಕು. ಅವರ ಟೀಕೆಗಳನ್ನು ನಾವು ಸ್ವಾಗತ ಮಾಡುತ್ತೇವೆ” ಎಂದರು.

ಬೇರೆಯವರನ್ನು ಟೀಕಿಸಿದಂತೆ ನನ್ನ ಟೀಕಿಸಿದರೆ ನಡೆಯಲ್ಲ

“ಈಗ ವಿಪಕ್ಷದಲ್ಲಿ ಇರುವವರು ಒಂದೇ ಒಂದು ಕೆಲಸ ಮಾಡಲಿಲ್ಲ. ಒಂದು ಲಾರಿ ಕಸವನ್ನ ಗೊಬ್ಬರ, ಇಂಧನ ಹೀಗೆ ಯಾವ ಕೆಲಸವನ್ನೂ ಮಾಡಲಿಲ್ಲ. ಬೇರೆ ಯಾರನ್ನೋ ಟೀಕಿಸಿದಂತೆ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇದೆಲ್ಲಾ ನಡೆಯುವುದಿಲ್ಲ. ಪ್ರತಿಭಟನೆ ಮಾಡಲಿ, ಏನು ಬೇಕಾದರೂ ಮಾಡಲಿ, ಜೊತೆಗೆ ಮಾರ್ಗದರ್ಶನ ನೀಡಿದರೂ ನಾನು ಕೇಳುತ್ತೇನೆ” ಎಂದರು.

“ಬೆಂಗಳೂರಿನ ಆಡಳಿತದ ಮೇಲಿನ ಒತ್ತಡ ತಗ್ಗಿಸಲು ಐದು ಪಾಲಿಕೆಗಳನ್ನು ಮಾಡಿದ್ದು ನನ್ನ ಒಬ್ಬನ ತೀರ್ಮಾನ ಮಾತ್ರವಲ್ಲ. ವಿರೋಧ ಪಕ್ಷದವರ ಸಲಹೆ ಪಡೆದೆ ಈ ತೀರ್ಮಾನ ಮಾಡಲಾಗಿದೆ. ಯಲಹಂಕ, ಕೆಂಗೇರಿ ಸೇರಿದಂತೆ ಇತರೇ ಟೌನ್ ಶಿಪ್ ಗಳನ್ನು ಅವರೇ ರೂಪಿಸಿದ್ದು ಆದರೆ ಈಗ ಡಿ ಕೆ ಶಿವಕುಮಾರ್ ಬೇರೆ ಏನೋ ಮಾಡುತ್ತಿದ್ದಾನೆ ಎಂದು‌ ಟೀಕೆ ಮಾಡುತ್ತಿದ್ದಾರೆ” ಎಂದರು.

ಅಂಗೈಗಳನ್ನು ಉಜ್ಜಿಕೊಳ್ಳುತ್ತಾ ಡಾಕ್ಟರ್ ಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ

ಅಕ್ಬರ್ ತನ್ನ ಆಸ್ಥಾನದಲ್ಲಿ ಬೀರ್ ಬಲ್ ವಿರುದ್ದ ಅಸಮಾಧಾನ ಉಂಟಾದಾಗ ಎಲ್ಲರನ್ನು ಸೇರಿಸಿ ಒಂದು ಪ್ರಶ್ನೆ ಕೇಳುತ್ತಾನೆ. ಅಂಗೈಯಲ್ಲಿ ಏಕೆ ಕೂದಲಿಲ್ಲ ಎಂದು ಅದಕ್ಕೆ ಬೇರೆಯವರು ಬೇರೆ ಬೇರೆ ಉತ್ತರ ನೀಡಿದರು. ಆದರೆ ಸರಿಯಾದ ಉತ್ತರ ನೀಡಲಿಲ್ಲ. ನಂತರ ಬೀರ್ಬಲ್ ಸರದಿ ಬಂದಾಗ ‘ನೀವು ಮಹಾದಾನಿಗಳು ದಾನ ಮಾಡಿ ಮಾಡಿ ಕೈಯಲ್ಲಿ ಕೂದಲು ಇಲ್ಲ’. ಅದಕ್ಕೆ ಅಕ್ಬರ್ ನಿಮ್ಮ ಕೈಯಲ್ಲಿ ಏಕೆ ಕೂದಲಿಲ್ಲ ಎಂದಾಗ, ‘ನಾನು ದಾನ ಪಡೆದು ಪಡೆದು ಕೂದಲಿಲ್ಲ’ ಎನ್ನುತ್ತಾರೆ. ಆದರೆ ಸಭಿಕರ ಕೈಯಲ್ಲಿ ಏಕೆ ಕೂದಲಿಲ್ಲ ಎಂದಾಗ, ‘ನಮಗೆ ಸಿಗಲಿಲ್ಲವಲ್ಲ ಅಂತ ಕೈ ಉಜ್ಜಿ ಉಜ್ಜಿ ಕೂದಲು ಇಲ್ಲ’ ಎಂದು ಹೇಳಿದರು. ಹೊಟ್ಟೆಯುರಿ ಮಾಡಿಕೊಳ್ಳುತ್ತಿದ್ದಾರೆ. ದಳ ಹಾಗೂ ಬಿಜೆಪಿಯವರು ನಮಗೆ ಸಿಗಲಿಲ್ಲ ಎಂದು ತಮ್ಮ, ತಮ್ಮ ಅಂಗೈಗಳನ್ನು ಉಜ್ಜಿಕೊಳ್ಳುತ್ತಾ ಡಾಕ್ಟರ್ ಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಅವರ ಚಿಂತೆಯನ್ನು ನಾವು ಮಾಡುವುದು ಬೇಡ. ಬೇರೆಯವರ ಸುದ್ದಿಯನ್ನು ನಾನು ಮಾತನಾಡಲು ಹೋಗುವುದಿಲ್ಲ” ಎಂದರು.

“ಅವಕಾಶ ಸಿಕ್ಕಾಗ ಕೆಲಸ ಮಾಡಲಿಲ್ಲ. ಈಗ ಜನ ನಮಗೆ 136 ಸ್ಥಾನ ನೀಡಿದ್ದಾರೆ.‌ ನಮಗೆ ಸಿಕ್ಕ ಅವಕಾಶದಿಂದ ಈ ರಾಜ್ಯದ, ಬೆಂಗಳೂರಿನ ಜನರ ಸೇವೆ ಮಾಡುತ್ತಿದ್ದೇವೆ. ನಮಗೆ ಮತದಾರರೇ ದೇವರು. ನಿಮ್ಮ ಸೇವೆಗೆ ನಾವಿದ್ದೇವೆ. 1.50 ಲಕ್ಷ ಕೋಟಿ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿಗೆ ರೂಪಿಸಿದ್ದೇವೆ. ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಸಮರ್ಥವಾಗಿ ಜನರ ದಾಖಲೆ, ಆಸ್ತಿಗಳನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. 30-40 ಲಕ್ಷ ಕುಟುಂಬಗಳಿಗೆ ಆಸ್ತಿ ದಾಖಲೆಯನ್ನು ಅವರ ನೇತೃತ್ವದಲ್ಲಿ ನೀಡಲಾಗುತ್ತದೆ” ಎಂದರು.

“ಒಂದಷ್ಟು ಜನ ಟೀಕೆ ಮಾಡುತ್ತಾರೆ ಆದರೆ ನಮ್ಮ ಕೆಲಸಗಳು ಉಳಿಯುತ್ತವೆ. ತುಂಗಭದ್ರಾ ಅಣೆಕಟ್ಟು 19 ನೇ ಗೇಟ್ ಕಿತ್ತು ಹೋದಾಗ ಸಾಕಷ್ಟು ಟೀಕೆ ಮಾಡಿದರು. ನಾನು ಅದೇ ದಿನ ರಾತ್ರಿ ತೆರಳಿ ತಕ್ಷಣ ಕ್ರಮ ತೆಗೆದುಕೊಂಡೆವು. ಆನಂತರ ಎಲ್ಲಾ ಗೇಟ್ ಗಳನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಲಾಯಿತು” ಎಂದು ಹೇಳಿದರು.

ಇಂದಿರಾಗಾಂಧಿ ‌ಅವರು ಕಾವೇರಿ ನೀರಿ‌ನ ವಿಚಾರವಾಗಿ ಕರ್ನಾಟಕ,‌ ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಯವರನ್ನು ಸೇರಿಸಿ ಒಪ್ಪಂದ ಮಾಡಿದ್ದರು. ಅದೇ ರೀತಿ ನಮ್ಮ ಪಾಲಿನ 33 ಟಿಎಂಸಿ ತುಂಗಭದ್ರಾ ‌ನೀರಿನ ವಿಚಾರದಲ್ಲಿ ಮೂರು ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಸೇರಿ ತುಂಗಭದ್ರಾ ನೀರಿನ ವಿಚಾರ ಹಾಗೂ ಗೋದಾವರಿ ಕಾವೇರಿ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಎಲ್ಲರು ಒಗ್ಗಟ್ಟಾಗಿ ಮಾದರಿ ಕಾರ್ಯಕ್ರಮ ರೂಪಿಸಲು ತೀರ್ಮಾನ ಮಾಡಿದ್ದೇವೆ. ಯಾವುದೇ ವಿರೋಧ ಪಕ್ಷದವರು ಮಾಡಿರುವ ಟೀಕೆಗಳು ಸತ್ತಿವೆ” ಎಂದರು.

“ಶನಿವಾರ ಕೆಂಪೇಗೌಡ ಜಯಂತಿ ಆಚರಿಸಿದ್ದೇವೆ. ಹಸಿರು ಬೆಂಗಳೂರು ಕಾರ್ಯಕ್ರಮದ ಮೂಲಕ 15 ಲಕ್ಷ ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಕೆಲಸ ಮಾಡಿದ್ದೇವೆ. ಗಿನ್ನಿಸ್ ದಾಖಲೆಯಾಗಿ ಇದು ಮಾರ್ಪಟ್ಟಿದೆ. ಇದು ನನ್ನ ಒಬ್ಬನ ಸಾಧನೆಯಲ್ಲ. ಸರ್ಕಾರದ ಎಲ್ಲಾ ಸಚಿವರು, ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸಾಧನೆ. ಎಲ್ಲರಿಗೂ ನನ್ನ ನಮಸ್ಕಾರಗಳು. ಭಾನುವಾರ ಸೂರ್ಯನವಾರ ಶುಭದಿನ ಇಂದೇ ಈ ಟನಲ್ ಯೋಜನೆ ಶಂಕುಸ್ಥಾಪನೆ ಆಗಲಿ ಎಂಬುದು ಎಲ್ಲರ ಅಭಿಲಾಷೆಯಾಗಿತ್ತು. ಸೂರ್ಯ ಶಕ್ತಿ ಬೆಂಗಳೂರಿಗೆ ಹೆಚ್ಚು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.


Share

You cannot copy content of this page