ಬೆಂಗಳೂರು: ಕೃಷಿ ಕಾಯಕಲ್ಪಕ್ಕೆ ಮುನ್ನಡಿ ಇಟ್ಟಿರುವ ರಾಜಸ್ಥಾನ ಸರ್ಕಾರ, ‘ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ (ಜಿ.ಆರ್.ಎ.ಎಂ)-2026’ ಮೂಲಕ ಕೃಷಿ ಅವಿಸ್ಕಾರ, ಕೃಷಿ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆಸಿದ ರೋಡ್ ಶೋ ನಲ್ಲಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್- 2026 ಮುಖ್ಯ ಸಮಾವೇಶ ಮೇ 23 ರಿಂದ 25, 2026 ರವರೆಗೆ ಜೈಪುರದಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ರಾಜಸ್ಥಾನ ಸರ್ಕಾರದ ಕೃಷಿ ಇಲಾಖೆ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಟನೆ (ಎಫ್ಐಸಿಸಿಐ) ಮತ್ತು ರಾಜಸ್ಥಾನ ಪ್ರತಿಷ್ಠಾನದ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ರೋಡ್ ಶೋ ನಲ್ಲಿ ಅವರು ಮಾತನಾಡಿದರು. “ರಾಜಸ್ಥಾನವು ತನ್ನ ಸಾಂಪ್ರದಾಯಿಕ ಕೃಷಿ ಸಾಮರ್ಥ್ಯಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಕೃಷಿ ತಂತ್ರಜ್ಞಾನ ಆಧಾರಿತ ಆರ್ಥಿಕತೆಯನ್ನು ಸದೃಢಗೊಳಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ (ಜಿ.ಆರ್.ಎ.ಎಂ)-2026 ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ರಾಜಸ್ಥಾನ ಸರ್ಕಾರವು ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತಿದೆ. 2024ರ ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆಯ ಸಂದರ್ಭದಲ್ಲಿ ಸಹಿ ಹಾಕಲಾದ 35 ಲಕ್ಷ ಕೋಟಿ ರೂ. ಒಪ್ಪಂದಗಳಲ್ಲಿ ಈಗಾಗಲೇ 9 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲೂ ಇದೇ ರೀತಿಯ ಹೂಡಿಕೆಗೆ ವಿಪುಲ ಅವಕಾಶವಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ಹೂಡಿಕೆದಾರರನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ರಾಜಸ್ಥಾನವು ಅಭಿವೃದ್ಧಿಯ ಜತೆಗೆ ವಿಕಸನಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಪ್ರಗತಿಪರ ಬದಲಾವಣೆಯನ್ನು ಅಳವಡಿಸಿಕೊಳ್ಳುತ್ತಿದೆ. ಕೃಷಿ ಕ್ಷೇತ್ರದಲ್ಲೂ ಇದೇ ರೀತಿಯ ಬದಲಾವಣೆಗಳಾಗಿತ್ತಿದ್ದು, ಈ ಸಂದರ್ಭದಲ್ಲಿ ಕರ್ನಾಟಕದೊಂದಿಗೆ ಸೇರಿ ರೈತರನ್ನು ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಮುಂದುವರಿಯಲು ಆಸಕ್ತಿ ಹೊಂದಿದ್ದೇವೆ. ಎರಡೂ ರಾಜ್ಯಗಳ ಮಧ್ಯೆ ಸೌಹಾರ್ದಯುತ ವಾತಾವರಣವಿದ್ದು, ರಾಜಸ್ಥಾನದ ಪ್ರಗತಿ ಮತ್ತು ಕೃಷಿ ಕ್ರಾಂತಿಯಲ್ಲಿ ಕರ್ನಾಟವನ್ನು ನಮ್ಮೊಂದಿಗೆ ಪಾಲುದಾರರಾಗಿ ಹೊಂದಲು ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಹೇಳಿದರು.
ಅಗ್ರಿಟೆಕ್ ಮೀಟ್ ಕುರಿತು ಮಾತನಾಡಿದ ಭಜನ್ಲಾಲ್ ಶರ್ಮ, ಕೃಷಿ ಪದ್ಧತಿಗಳನ್ನು ಆಧುನೀಕರಿಸುವ, ರೈತರ ಆದಾಯವನ್ನು ಹೆಚ್ಚಿಸುವ , ಆಹಾರ ಸಂಸ್ಕರಣೆ ಮತ್ತು ನಮ್ಮ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈಉಪಕ್ರಮವು ಸಾವಿರಾರು ರೈತರು, ತಜ್ಞರು ಮತ್ತು ಹೂಡಿಕೆದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ಸಹಕಾರಿಯಾಗಲಿದೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಸಚಿವ ಡಾ. ಕಿರೋಡಿ ಲಾಲ್ ಮೀನಾ ಮಾತನಾಡಿ, ರಾಜಸ್ಥಾನ ಸರ್ಕಾರವು ಹೂಡಿಕೆದಾರರಿಗೆ ಅನುಕೂಲವಾಗುವಂತೆ ನೀತಿ ರೂಪಿಸುತ್ತಿದ್ದು, ಅದಕ್ಕೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿ ಜತೆಗೆ ಹೊಸ ಆವಿಷ್ಕಾರಗಳ ಮೂಲಕ ಕೃಷಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಬಾರ್ಮರ್ನ ಪ್ರಗತಿಪರ ರೈತ ವಿಕ್ರಮ್ ಸಿಂಗ್ ರಾಥೋಡ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಪಾಲ್,ಎಫ್ಐಸಿಸಿಐ ಕರ್ನಾಟಕ ರಾಜ್ಯ ಕೃಷಿ ಮಂಡಳಿಯ ಉಪಸಮಿತಿ ಅಧ್ಯಕ್ಷ ರವೀಂದ್ರ ಅಗರ್ವಾಲ್, ರಾಜಸ್ಥಾನ್ ಫೌಂಡೇಶನ್ನ ಬೆಂಗಳೂರು ವಿಭಾಗದ ನಾಯಕರು ಸೇರಿದಂತೆ ರಾಜಸ್ಥಾನದ ಪ್ರತಿನಿಧಿಗಳು ರಾಜ್ಯದಲ್ಲಿ ಹೂಡಿಕೆ ಮತ್ತು ಪಾಲುದಾರಿಕೆಗಳಿಗೆ ಇರುವ ಅವಕಾಶಗಳ ಬಗ್ಗೆ ಮಾತನಾಡಿದರು.
ಜಿಆರ್ಎಎಂ ಸಮಾವೇಶದಲ್ಲಿ ರಾಜಸ್ಥಾನದ ಕೃಷಿ ಮತ್ತು ಕೃಷಿ ತಂತ್ರಜ್ಞಾನ ವಲಯಗಳಲ್ಲಿನ ವಿಪುಲ ಅವಕಾಶಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಜಿ.ಆರ್.ಎ.ಎಂ-2026 ಕುರಿತ ಸಾಕ್ಷ್ಯಾಚಿತ್ರವನ್ನು ಪ್ರದರ್ಶಿಸಲಾಯಿತು. ಕೃಷಿ, ಕೃಷಿ ತಂತ್ರಜ್ಞಾನ, ಹೂಡಿಕೆ ಮತ್ತು ಪಾಲುದಾರಿಕೆ ಅವಕಾಶಗಳ ಕುರಿತು ವ್ಯಾಪಕ ಚರ್ಚೆಗಳು ನಡೆದವು, ಉದ್ಯಮ ಪ್ರತಿನಿಧಿಗಳು ಕೃಷಿ ಪರಿಣಿತರು ಮಹತ್ವದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
